ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ವೇಶ್ಯಾವೃತ್ತಿಗೆ ಕಾನೂನಿನ ಮಾನ್ಯತೆ ಸಿಗಬೇಕೆನ್ನುವ ವಿಚಾರದಲ್ಲಿ ಒಂದು ಮಹತ್ವದ ಚರ್ಚೆಯನ್ನು ಪ್ರಾರಂಭಿಸಿದ್ದಾರೆ. ಬದುಕಿನಲ್ಲಿ ಯಾವುದೇ ವೃತ್ತಿಯೂ ಕೀಳು ಎಂದು ಭಾವಿಸಬಾರದು. ಏಕೆಂದರೆ ಮಾನವ ಸಮಾಜದಲ್ಲಿ ಅನೇಕ ವೃತ್ತಿಗಳು ಜನರ ಬೇಡಿಕೆಗಳಿಂದಲೇ ಉದ್ಭವಿಸಿವೆ.
ಜಗತ್ತಿನ ಇತಿಹಾಸವನ್ನು ಗಮನಿಸಿದಾಗ ಹಲವಾರು ಆಶ್ಚರ್ಯಕರ, ಕೌತುಕಮಯ ಮತ್ತು ಅನಪೇಕ್ಷಿತ ಘಟನೆಗಳು ನಡೆದಿರುವುದು ಕಂಡುಬರುತ್ತವೆ. ದೇಶದೊಳಗೆ ಹಾಗೂ ವಿದೇಶಗಳಲ್ಲಿ ಯುದ್ಧಗಳು ನಡೆಯುವಾಗ ಯೋಧರು ವರ್ಷಾನುಗಟ್ಟಲೆ ತಮ್ಮ ಮನೆ–ಮಾರು ಬಿಟ್ಟು ದೇಶದ ಭದ್ರತೆಯನ್ನು ಕಾಪಾಡುವುದಕ್ಕಾಗಿ ಜೀವದ ಭಯವಿಲ್ಲದೆ ಕಾದಾಡಬೇಕಾದ ಅನೇಕ ಪ್ರಸಂಗಗಳು ಬರುತ್ತವೆ.
ವಿವಾಹಿತರಾಗಲಿ, ಅವಿವಾಹಿತರಾಗಲಿ, ವರ್ಷಾನುಗಟ್ಟಲೆ ಮನೆಯಿಂದ ದೂರವಿದ್ದಾಗ ಅವರಲ್ಲಿ ಜೀವನದ ಬಗ್ಗೆಯೇ ಜುಗುಪ್ಸೆ ಹುಟ್ಟುವುದು ಸಹಜ. ಎಷ್ಟೋ ಸಂದರ್ಭಗಳಲ್ಲಿ ಕೆಲವು ಯೋಧರು ಆತ್ಮಹತ್ಯೆಯನ್ನೂ ಮಾಡಿಕೊಂಡ ಘಟನೆಗಳು ದಾಖಲಾಗಿವೆ. ಇಂಥ ಅನೇಕ ಸಂದರ್ಭಗಳಲ್ಲಿ ಆಯಾ ಪ್ರದೇಶದಲ್ಲಿ ಸಮಾಜದ ಒಂದು ವರ್ಗದ ಮಹಿಳೆಯರು ಯೋಧರಿಗೆ ಆಸರೆಯಾಗಿದ್ದಾರೆ. ಅವರನ್ನು ಸಂತೈಸಿದ್ದಾರೆ. ಅವರ ಬದುಕಿನಲ್ಲಿ ನೆಮ್ಮದಿ ತಂದಿದ್ದಾರೆ. ದೈಹಿಕ ಸಂಪರ್ಕ ಕೆಲವೊಮ್ಮೆ ಅವರ ಮಧ್ಯೆ ಮದುವೆಗೂ ದಾರಿಮಾಡಿಕೊಟ್ಟಿದೆ.
ಇಂತಹ ಮಹಿಳಾ ಸಮುದಾಯವನ್ನು ವೇಶ್ಯೆಯರು ಎಂದು ಕ್ಷುಲ್ಲಕವಾಗಿ ಪರಿಗಣಿಸಬಹುದೇ? ಅವರು ಗಂಡಸರ ಜತೆಗೆ ಸಮಯ ಕಳೆದದ್ದಕ್ಕಾಗಿ ಅವರನ್ನು ದೈಹಿಕವಾಗಿ ತೃಪ್ತಿಪಡಿಸಿದ್ದಕ್ಕಾಗಿ ಸಂಭಾವನೆಯನ್ನು ಪಡೆದಿರಬಹುದು. ಆದರೆ ಅವರ ವೃತ್ತಿ ಕೂಡ ಒಂದು ಸೇವೆ ಎಂದು ಪರಿಗಣಿಸುವುದು ಅರ್ಥಪೂರ್ಣವಲ್ಲವೆ?
ಅಮೆರಿಕದ ಇತಿಹಾಸ ತುಂಬ ಸಾಹಸಮಯವಾಗಿದೆ. ಪ್ರಖ್ಯಾತ ಲೇಖಕ ಜಾಕ್ ಲಂಡನ್ ಕೆಲವು ಕತೆಗಳಲ್ಲಿ ಸ್ವಂತ ಜೀವನದ ಸಾಹಸಗಳನ್ನು ವರ್ಣಿಸಿದ್ದಾನೆ. ಅವನ ಬಾಲ್ಯ ತುಂಬ ನೋವಿನಿಂದ ಕೂಡಿತ್ತು. ಅವನಿಗೆ ಹಣದ ಅಭಾವವಿದ್ದಾಗ ಉದ್ಯೋಗ ಅವಕಾಶಗಳು ಇಲ್ಲದಿದ್ದಾಗ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುತ್ತಾನೆ ಹಾಗೂ ಸಮುದ್ರದಲ್ಲಿ ಅಹೋರಾತ್ರಿ ಮುತ್ತುಗಳನ್ನು ಹುಡುಕಿಕೊಂಡು ಹೋಗುತ್ತಾನೆ. ತಮ್ಮ ಜೀವನವನ್ನೇ ಒತ್ತೆ ಇಡಬೇಕಾಗುವ ಸಂದರ್ಭಗಳನ್ನು ವರ್ಣಿಸುತ್ತಾನೆ.
ಇಂತಹ ಸಂದರ್ಭದಲ್ಲಿ ಸಮಾಜದ ಒಂದು ವರ್ಗದ ಕೆಲ ಯುವತಿಯರು, ಈ ರೀತಿ ಕಷ್ಟದಲ್ಲಿ ದುಡಿಯುತ್ತಿದ್ದ ಯುವಕರಿಗೆ ಯಾವ ರೀತಿ ಆಸರೆಯಾಗಿದ್ದಾರೆ ಎನ್ನುವುದನ್ನು ಕೃತಜ್ಞತೆಯಿಂದ ನೆನೆಸಿಕೊಂಡಿದ್ದಾನೆ. ಎಷ್ಟೋ ಸಲ ಅಂತಹ ಯುವತಿಯರು ತಮ್ಮ ಪ್ರಾಣ ಕಳೆದುಕೊಂಡಿದ್ದನ್ನು ಸ್ಮರಿಸುತ್ತಾನೆ. ಸೊಕ್ಕಿನಿಂದ ಮೆರೆಯುವ ಅಮೆರಿಕದ ಶ್ರೀಮಂತ ವರ್ಗದ ಯುವತಿಯರಿಗೆ ಹೋಲಿಸಿದರೆ ಯಾವ ಆಮಿಷವೂ ಇಲ್ಲದೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡ ಬಡ ಯುವತಿಯರು ಎಷ್ಟು ಉತ್ತಮರು ಎಂದು ಪ್ರಸ್ತಾಪಿಸುವ ಜಾಕ್ ಲಂಡನ್ ಚಿಂತನೆ ವೇಶ್ಯಾ ಸಮೂಹದ ಕಡೆಗೆ ಹೊಸ ದೃಷ್ಟಿಕೋನದಿಂದ ನೋಡುವ ಹಾಗೆ ಮಾಡುತ್ತದೆ.
ಅಮೆರಿಕದ ಲಾಸ್ ಏಂಜಲೀಸ್ ಸಮೀಪದಲ್ಲಿ ಒಂದು ಸ್ಥಾವರವನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದ ಎಂಜಿನಿಯರುಗಳು ೨೦೦ ವರ್ಷಗಳ ಹಿಂದೆ ಕಟ್ಟಲಾದ ಒಂದು ಮುರಿದು ಬಿದ್ದ ಬಡಾವಣೆಯನ್ನು ೩೦ ವರ್ಷಗಳ ಹಿಂದೆ ಶೋಧಿಸಿದರು. ಕಟ್ಟಿಗೆ ಮತ್ತು ಕಲ್ಲುಗಳಿಂದ ಕಟ್ಟಿದ ಹಳೆ ವಿನ್ಯಾಸದ ಮನೆಗಳು ಅಲ್ಲಿ ದೊರೆತವು. ಅದನ್ನು ಅಲ್ಲಿಯ ಪ್ರಾಚ್ಯ ವಸ್ತುಗಳ ತಜ್ಞರು ಅಧ್ಯಯನ ಮಾಡಿದರು. ಅಲ್ಲಿ ಅವರಿಗೆ ಕೆಲವು ಕೌತುಕಮಯ ವಸ್ತುಗಳು ದೊರೆತವು. ಅವುಗಳನ್ನು ಅಲ್ಲಿಯ ಸಮಾಜಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಪರೀಕ್ಷಿಸಿ ಇಲ್ಲಿ ವೇಶ್ಯೆಯರ ಸಮುದಾಯ ನೆಲೆಸಿತ್ತು ಎಂದು ಗುರುತಿಸಿದ್ದಾರೆ.
ಇಲ್ಲಿ ವೇಶ್ಯೆಯರ ಸಮುದಾಯವಿರಲು ಕಾರಣವೆಂದರೆ, ಆ ಪ್ರದೇಶದಲ್ಲಿ, ಅಂದರೆ, ಲಾಸ್ ಏಂಜಲೀಸ್, ಸ್ಯಾನ್ಫ್ರಾನ್ಸಿಸ್ಕೊ ಸುತ್ತಲೂ 200 ವರ್ಷಗಳ ಹಿಂದೆ ಚೀನಾ ಹಾಗೂ ಏಷ್ಯಾ ಖಂಡದ ಇತರ ಜನರು ರಹದಾರಿಗಳನ್ನು ನಿರ್ಮಿಸಲು, ಭೂಮಿ ತೋಡಲು, ಕಾಲುವೆಯನ್ನು ಕೊರೆಯಲು ಬಂದು ನೆಲೆಸಿದ್ದರು. ಈ ಕಾರ್ಮಿಕರು ಬಂದು ನೆಲೆಸಿದಾಗ ಅವರ ಜತೆ ಸಂಗಾತಿಗಳಿರಲಿಲ್ಲ. ಅವರಿಗೆ ಊಟ, ತಿಂಡಿ, ಮನರಂಜನೆ ಒದಗಿಸಲು ಒಂದು ವರ್ಗದ ಸ್ತ್ರೀಯರು ಬಂದು ಅಲ್ಲಿ ನೆಲೆಸಿದ್ದರು. ಕ್ರಮೇಣ ಎಷ್ಟೋ ಮಹಿಳೆಯರು ಸೇವೆ ಸಲ್ಲಿಸುತ್ತ ಕಾರ್ಮಿಕರ ಕಷ್ಟ-, ನಷ್ಟಗಳನ್ನು ಅರಿತು ಅನುಭವಿಸಿ ಅವರ ಜತೆ ಸೇರಿ ಸಂಸಾರ ಹೂಡಿದರು. ಅವರ ಮೊಮ್ಮಕ್ಕಳು, ಮರಿ-ಮಕ್ಕಳು ಇವತ್ತು ಅಮೆರಿಕದ ಜನಸಮೂಹದಲ್ಲಿ ವಿಲೀನರಾಗಿ ಹೋಗಿದ್ದಾರೆ.
ವೇಶ್ಯಾವಾಟಿಕೆ ಎಂದರೆ ತುಚ್ಛ ಭಾವನೆ ಬರುವ ಹಾಗೆ ಸಮಾಜ ವರ್ತಿಸುತ್ತದೆ. ವೇಶ್ಯೆಯರ ಜೀವನವನ್ನು ಕೂಲಂಕಷವಾಗಿ ನೋಡುವ ಅವಶ್ಯಕತೆ ಇದೆ. ನಾನು ೨೦ ವರ್ಷಗಳ ಹಿಂದೆ ‘ಏಡ್ಸ್’ ವಿಷಯದ ಮೇಲೆ ಒಂದು ಕಿರು ಚಿತ್ರ ಮಾಡಿದ್ದೆ. ಆ ಸಮಯದಲ್ಲಿ ಮುಂಬೈನ ಒಂದು ಆಸ್ಪತ್ರೆಯಲ್ಲಿ ಎಚ್ಐವಿ ಸೋಂಕು ತಗುಲಿದವರನ್ನು ಭೇಟಿಯಾಗಿದ್ದೆ. ಗ್ರಾಂಟ್ ರೋಡ್ನ ಸಮೀಪದಲ್ಲಿರುವ ಕಾಮಾಟಿಪುರದಲ್ಲಿ ವಾಸಿಸುವ ವೇಶ್ಯೆಯರಲ್ಲಿ ಕೆಲವರ ಮನೆಗಳಿಗೆ ಭೇಟಿ ಕೊಟ್ಟು ಅವರ ಬದುಕಿನ ಕ್ರಮ ಮತ್ತು ಸಮಸ್ಯೆಗಳನ್ನು ಕುರಿತು ಚರ್ಚಿಸಿದ್ದೇನೆ.
ಎಷ್ಟೋ ವೇಶ್ಯೆಯರಿಗೆ ಯಾಕೆ ಅಲ್ಲಿಗೆ ಬಂದಿದ್ದೇವೆ, ಏನು ಮಾಡುತ್ತಿದ್ದೇವೆ, ಭವಿಷ್ಯವೇನು ಎನ್ನುವ ಕಲ್ಪನೆಯೇ ಇಲ್ಲ. ಅಂತಹ ಮುಗ್ಧರು. ಅವರು ಕಡು ಬಡತನದ ಹಿನ್ನೆಲೆಯಿಂದ ಬಂದವರು. ಹೊಟ್ಟೆಗೆ ನೀರು, ಅನ್ನ, ಆಸರೆ ಕೊಡಲಾಗದೆ ತಂದೆ ತಾಯಂದಿರಿಂದ ಮಾರಾಟವಾದ ಈ ಮುಗ್ಧ ಹೆಂಗಳೆಯರು ವೇಶ್ಯೆಯರಾಗಿ ಬದುಕುತ್ತಿರುವುದನ್ನು ನೋಡಿದಾಗ ಕರುಳು ಹಿಂಡಿದ ಹಾಗೆ ಆಗುತ್ತದೆ. ಇದಕ್ಕೆಲ್ಲ ಸಮಾಜದಲ್ಲಿರುವ ಅಸಮಾನತೆಯೇ ಕಾರಣ ಎನ್ನುವುದು ನನಗೆ ಅರಿವಾಯಿತು.
ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸುವುದು ಆ ವೃತ್ತಿಯಲ್ಲಿ ತೊಡಗಿದವರಿಗೂ ಹಾಗೂ ಅವರ ವೃತ್ತಿಗೆ ಕಾರಣವಾದ ಸಮಾಜಕ್ಕೂ ಒಳ್ಳೆಯದು. ಸಮಾಜದಲ್ಲಿ ಎಷ್ಟೋ ಗಂಡಸರಿಗೆ ಮದುವೆ ಮಾಡಿಕೊಳ್ಳಲು ಮನಸ್ಸಿರುವುದಿಲ್ಲ. ಅನೇಕ ಒತ್ತಡಗಳಿಂದ ಮದುವೆ ಮಾಡಿಕೊಳ್ಳಬೇಕಾಗುತ್ತದೆ. ಮುಂದೆ ಇಂತಹ ಸಂಸಾರಗಳು ಮುರಿದುಬೀಳುತ್ತವೆ. ಅಷ್ಟೇ ಅಲ್ಲದೆ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿದರೆ, ಮದುವೆ ಮಾಡಿಕೊಳ್ಳುವ ಆಸೆ ಇಲ್ಲದ ಸಾವಿರಾರು ಗಂಡಸರು ಸಂಸಾರ ಹೂಡುವ ಅವಶ್ಯಕತೆ ಇರುವುದಿಲ್ಲ. ಮನೆ ಕಟ್ಟುವ, ಸಂಸಾರ ಸಾಗಿಸುವ, ಮಕ್ಕಳನ್ನು ಬೆಳೆಸುವ ಜಂಜಾಟಕ್ಕೆ ಬೀಳಬೇಕಾಗಿಲ್ಲ.
ಹೆಂಡತಿ ಮಕ್ಕಳಿಗಾಗಿ ಹಣ ಕೂಡಿಸಿ ಇಡುವುದು, ಆಸ್ತಿ ಮಾಡುವುದು ಮತ್ತು ಇಂತಹ ಕೆಲಸಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗುವುದು ಇವೆಲ್ಲವೂ ಕಡಿಮೆಯಾಗುವ ಸಂಭವವಿದೆ. ಅಂದರೆ ವೇಶ್ಯಾವೃತ್ತಿಯನ್ನು ಬರೀ ಲೈಂಗಿಕ ದೃಷ್ಟಿಕೋನದಿಂದ ಮಾತ್ರ ನೋಡಬೇಕಿಲ್ಲ. ಸಮಾಜದ ಕೆಲವು ಸಮಸ್ಯೆಗಳ ನಿವಾರಣೆಗೆ, ಅಮಾಯಕ ಹೆಂಗಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡುವಲ್ಲಿ ಮತ್ತು ಮುಖ್ಯವಾಗಿ ಏರುತ್ತಿರುವ ಜನಸಂಖ್ಯೆಯ ನಿಯಂತ್ರಣದಲ್ಲಿ ವೇಶ್ಯಾವೃತ್ತಿಯ ಪಾತ್ರವನ್ನು ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಪರಿಗಣಿಸುವುದು ಅವಶ್ಯವಾಗಿದೆ.
ಇಲ್ಲಿ ಒಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ. - ಜಪಾನ್ ದೇಶದ ಟೋಕಿಯೊ ಮಹಾನಗರದಲ್ಲಿ ಜನಸಂಖ್ಯೆ ಅತಿಯಾಗಿದ್ದು ಅಲ್ಲಿ ಮನೆ ಬಾಡಿಗೆಗೆ ಸಿಗುವುದು ದುರ್ಲಭ. ಕಾರ್ಖಾನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುವ ಸಾವಿರಾರು ಯುವಕರು ಒಂದೇ ಕೋಣೆ ಇರುವ ಅಪಾರ್ಟ್ಮೆಂಟ್ಗಳಲ್ಲಿ ವಾಸ ಮಾಡುತ್ತಾರೆ. ಅವರು ತಮ್ಮ ಮಾನಸಿಕ ಮತ್ತು ದೈಹಿಕ ಮನರಂಜನೆಗಾಗಿ, ವಿಶ್ರಾಂತಿಗಾಗಿ ಕೆಲವೊಂದು ಹೋಟೆಲ್ಗಳಿಗೆ ಹೋಗುತ್ತಾರೆ.
ಅಲ್ಲಿ ಅವರಿಗೆ ಸಂಗಾತಿಗಳಾಗಿ ‘ಗೀಷ’ (ಗಂಡಸರಿಗೆ ಸೇವೆ ಸಲ್ಲಿಸುವ ಸ್ತ್ರೀಯರು) ಜತೆ ನೀಡುತ್ತಾರೆ. ಇಂತಹ ಎಷ್ಟೋ ಯುವಕರು ತಮಗೆ ಸಂಸಾರ ಬೇಡವೆಂದು ಹೇಳುತ್ತಾರೆ. ನಮಗೆ ಜೀವನದಲ್ಲಿ ತೃಪ್ತಿ ಇದೆ, ಇರುವವರೆಗೆ ಹುರುಪಿನಿಂದ ಕೆಲಸ ಮಾಡುತ್ತೇವೆ, ನೆಮ್ಮದಿಯಿಂದ ಸುಖವಾಗಿ ಬದುಕುತ್ತೇವೆನ್ನುತ್ತಾರೆ. ೧೨೦ ಕೋಟಿ ಜನರಿಂದ ತುಂಬಿದ ಭಾರತ ಹೊಸ ಸಮಾಜ ರೂಪಿಸುವ ಕಡೆಗೆ ದೃಷ್ಟಿ ಹೊರಳಿಸಬಹುದೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.